ಶುಕ್ರವಾರ, ಫೆಬ್ರವರಿ 10, 2017

ಸ್ಟೀವ್ ಬ್ಯಾನನ್ ಬಾಯಲ್ಲಿ ಭಗವದ್ಗೀತೆ!

ಹಿಂದೂ ಪುರಾಣಗಳು, ಮಹಾಕಾವ್ಯಗಳು ಇನ್ನಿತರ ಧರ್ಮ ಗ್ರಂಥಗಳು ಜಗತ್ತಿನಾದ್ಯಂಥ ಕುತೂಹಲ ಮೂಡಿಸಿವೆ. ಇತ್ತೀಚೆಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಮುಖ್ಯ ಸಮರತಾಂತ್ರಿಕ ಸಲಹೆಗಾರರಾಗಿರುವ ಸ್ಟೀವ್ ಬ್ಯಾನನ್ ಭಗವದ್ಗೀತೆಯೆ ಕಡೆಗೆ ತಮ್ಮ ಒಲವು ವ್ಯಕ್ತಪಡಿಸಿದ್ದು, ವಿಶ್ವ ರಾಜಕೀಯದೆಡೆಗಿನ ಅವರ ದೃಷ್ಟಿಕೋನವೂ ಗೀತೆಯ ಧರ್ಮಯುದ್ಧವನ್ನು ಪ್ರತಿನಿಧಿಸುತ್ತಿದೆ. ಹಾಗೆ ನೋಡಿದಲ್ಲಿ ಹಿಂದೂ ಧರ್ಮಗ್ರಂಥಗಳು ವಿದೇಶೀಯರನ್ನು ಆಕರ್ಷಿಸಿದ್ದು ಇದೇ ಮೊದಲ ಬಾರಿಯೇನಲ್ಲ. ಕಳೆದೆರಡು ಶತಮಾನಗಳಿಂದ ಪಾಶ್ಚಾತ್ಯ ವಿಜ್ಞಾನಿಗಳು ಮತ್ತು ಚಿಂತಕರನ್ನು  ಆಕರ್ಷಿಸಿದ ಹೆಗ್ಗಳಿಕೆ ಈ ವಿಶಿಷ್ಟ ಗ್ರಂಥಗಳಿಗಿವೆ. ಬ್ರಿಟನ್ನಿನ ಖ್ಯಾತ ತತ್ವಶಾಸ್ತ್ರಜ್ಞ  ಆಲ್ಡಸ್ ಹಕ್ಸ್‌ಲಿ ತನ್ನ ಕೃತಿ Brave New World ಬರೆಯುವಾಗ ಆತನ ತಲೆ ತುಂಬಾ ಭಗವದ್ಗೀತೆಯೇ ತುಂಬಿತ್ತು. ನಾಝಿ ಜರ್ಮನಿಯ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದ ಹೆನ್ರಿಚ್ ಹಿಮ್ಲರ್ ಕೂಡ ತಾನು ಗೀತೆಯೆ ಉಪದೇಶಗಳಿಂದ ಪ್ರಭಾವಿತನಾಗಿದ್ದನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದರು. ಇವಿಷ್ಟೇ ಅಲ್ಲದೇ 'ಲಾಸ್ ಅಲಮೊಸ್'ನ ಪ್ರಯೋಗಾಲಯದಲ್ಲಿ ವಿಶ್ವದ ಪ್ರಪ್ರಥಮ ಅಣ್ವಸ್ತ್ರವನ್ನು ಪರೀಕ್ಷಿಸಿದ ನಂತರ ರಾಬರ್ಟ್ ಒಪೆನ್ಹೈಮರ್ ಉದ್ಗರಿಸಿದ್ದು, " “Now I am become Death, the destroyer of worlds." ಈ ಮಾತುಗಳ ಹಿಂದಿನ ಪ್ರೇರಣೆ ಕೃಷ್ಣನ ವಿಶ್ವರೂಪ ದರ್ಶನ, "ನಾನೇ ಕಾಲ. ಎಲ್ಲಾ ಲೋಕಗಳ ಮಹಾನ್ ಕ್ಷಯಕಾರಿ..." (ಭಗವದ್ಗೀತೆ 11.32)

ಮಹಾಕಾವ್ಯ ಮಹಾಭಾರತದ ಒಂದು ಭಾಗವಾಗಿದ್ದರೂ ಭಗವದ್ಗೀತೆ ಇವತ್ತಿಗೆ ತನ್ನದೇ ಆದ ಪ್ರತ್ಯೇಕ ಅಸ್ಮಿತೆಯನ್ನೂ ಜನಮಾನಸದಲ್ಲಿ ಸೃಷ್ಟಿಸಿದೆ. ಮಹಾಭಾರತದ ಹೃದಯಭಾಗವಾದ ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನ ಶತ್ರುಪಾಳಯದಲ್ಲಿ ತಮ್ಮವರನ್ನೇ ಕಂಡು ಕರಗಿ ನೀರಾಗಿ ಯುದ್ಧ ಬೇಡ ಎಂದಾಗ ಸಾರಥಿಯಾಗಿದ್ದ ಕೃಷ್ಣ ಅರ್ಜುನನಿಗೆ ಯುದ್ಧಧರ್ಮ ಮಾತ್ರವಲ್ಲದೇ ಜೀವನ ಧರ್ಮ ಸಾರವನ್ನೇ ತಿಳಿಸಿಕೊಡುತ್ತಾನೆ. ಪ್ರಪಂಚದಲ್ಲಿ ಧರ್ಮವನ್ನು ನೆಲೆಗೊಳಿಸಲು ಶ್ರೀಕೃಷ್ಣ ಅರ್ಜುನನ ಕಣ್ತೆರಿಸಿದ ರೀತಿ, ಇವತ್ತಿಗೆ ಜಗತ್ತಿಗೆ ದಾರಿ ದೀಪವಾಗುವ ಭಗವದ್ಗೀತೆಯ ರೂಪದಲ್ಲಿ ನಮ್ಮ ಮುಂದಿದೆ. ಎಲ್ಲಾ ಬಂಧಗಳಿಗಿಂತ ಧರ್ಮ ಸಂಸ್ಥಾಪನೆ ಮುಖ್ಯ ಎಂದ ಗೀತೆ ಭಾರತದಲ್ಲಷ್ಟೇ ಅಲ್ಲದೇ ಪಶ್ಚಿಮದಲ್ಲೂ ಅನೇಕ ಪ್ರಭಾವಿ ವ್ಯಕ್ತಿತ್ವಗಳನ್ನು ಪ್ರಭಾವಿಸಿದೆ. ಈ ಪಟ್ಟಿಗೆ ಹೊಸ ಸೇರ್ಪಡೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಮುಖ್ಯ ಸಮರತಾಂತ್ರಿಕ ಸಲಹೆಗಾರ ಸ್ಟೀಫನ್ ಕೆವಿನ್ ಸ್ಟೀವ್ ಬ್ಯಾನನ್!

Image may contain: 1 personಬ್ಯಾನನ್ ಬಹಳಷ್ಟು ಹಿಂದಿನಿಂದಲೂ 'ಧರ್ಮ' ಎಂಬ ಪರಿಕಲ್ಪನೆಯ ಕುರಿತಾಗಿ ತಮ್ಮ ಆಪ್ತವಲಯದಲ್ಲಿ ಬಹಳಷ್ಟು ಚರ್ಚಿಸುತ್ತಿದ್ದರು. ಧರ್ಮ ಎಂಬ ಸಂಸ್ಕೃತ ಪದಕ್ಕೆ ಆಂಗ್ಲ ಭಾಷೆಯಲ್ಲಿ ಪರಿಪೂರ್ಣವಾಗಿ ಹೊಂದುವಂತಾ ಪರ್ಯಾಯ ಪದವಿಲ್ಲ. ಧರ್ಮಕ್ಕೊಂದು ಪರ್ಯಾಯ ಪದ ಹುಡುಕುವುದು ಕಷ್ಟ ಸಾಧ್ಯವೇ ಸರಿ. ಧರ್ಮ ಕೆಲವೊಮ್ಮೆ ಸರಿಯಾದದ್ದನ್ನೇ ಮಾಡುವುದು ಎಂಬರ್ಥ ನೀಡಿದರೆ, ಕೆಲವೊಂದು ಸಂದರ್ಭದಲ್ಲಿ ಅದೊಂದು ಕರ್ತವ್ಯ, ಇನ್ನೊಮ್ಮೆ ನಾವು ಮಾಡುವ ಕೆಲಸಕ್ಕೆ ಒದಗಿಸುವ ನ್ಯಾಯದಂತೆ ಕಾಣುತ್ತದೆ. ಆದರೆ ಇದ್ಯಾವುದೂ ಧರ್ಮ ಎಂಬ ಪದದ ಮೂಲ ಅರ್ಥಕ್ಕೆ ಸರಿಸಾಟಿಯಾಗಲಾರದು ಎನ್ನುವುದೂ ಅಷ್ಟೇ ಸತ್ಯ. ಈ ಮೇಲೆ ವಿವರಿಸಿದ ಸಾಲುಗಳೆಲ್ಲವನ್ನು ಒಳಗೊಂಡು, ಇವೆಲ್ಲವುಗಳಿಗೂ ಮೀರಿದ ಪರಿಕಲ್ಪನೆಯೇ ಧರ್ಮ. ಪ್ರತಿಯೊಬ್ಬ ವ್ಯಕ್ತಿಗೂ ಆತನ ಸ್ವಭಾವ ಮತ್ತು ಸಾಮಾಜಿಕ ಬದ್ಧತೆಗಳಿಗೆ ಅನುಗುಣವಾಗುವಂತೆ ಆತನದ್ದೇ ಆದ ಧರ್ಮವೊಂದಿದ್ದು ಅದನ್ನು ಪಾಲಿಸಬೇಕಾಗುತ್ತದೆ. ಗೀತೆಯ ಹದಿನೆಂಟನೇ ಅಧ್ಯಾಯದ 47ನೇ ಶ್ಲೋಕ ಪರಧರ್ಮವನ್ನು ಸ್ವೀಕರಿಸಿ ಅದನ್ನು ಪರಿಪೂರ್ಣವಾಗಿ ನಿಭಾಯಿಸುವುದಕ್ಕಿಂತ, ಸ್ವಧರ್ಮವನ್ನು ಅಪರಿಪೂರ್ಣವಾಗಿ ಮಾಡುವುದೇ ಶ್ರೇಯಸ್ಕರ. ತನ್ನ ಸ್ವಭಾವಕ್ಕನುಗುಣವಾಗಿ ವಿಧಿಸಿದ ಕರ್ತವ್ಯಗಳನ್ನು ಮಾಡುವುದು ಉತ್ತಮ ಎನ್ನುತ್ತದೆ. ಈ ತರ್ಕ ಬ್ಯಾನನ್ ಜೀವನದಲ್ಲಿ ಬಹಳಷ್ಟು ಪ್ರಭಾವಿಸಿತ್ತು. ನೀವು ಯಾವುದೇ ಹಿಂದೂ       ಧರ್ಮ ಗ್ರಂಥವನ್ನು ಗಮನಿಸಿದರೂ ಅಲ್ಲೊಂದು ಸಾಮಾನ್ಯ ಅಂಶವಿದೆ. ಅದೇನೆಂದರೆ, ಎಲ್ಲಾ ಗ್ರಂಥಗಳಲ್ಲೂ ಎಲ್ಲಾ ವ್ಯಕ್ತಿಗಳೂ ಒಂದೋ ಧರ್ಮವನ್ನು ಪರವಾಗಿ ಅಥವಾ ವಿರುದ್ಧವಾಗಿ ಹೋರಾಡುತ್ತಿರುತ್ತಾರೆ. ಈ ಹೋರಾಟ ಸಾಮಾಜಿಕ ನ್ಯಾಯ, ರಾಜಕೀಯ ಹಿತಾಸಕ್ತಿ ಅಥವಾ ಮಿಲಿಟರಿ ಸಂಘರ್ಷದ ರೂಪದಲ್ಲೂ ಇರಬಹುದು. ಈ ಎಲ್ಲಾ ವಿಚಾರಗಳು ಬ್ಯಾನನ್ ವೈಚಾರಿಕತೆಯ ಪ್ರತಿ ಮಗ್ಗುಲಲ್ಲೂ ಕಾಣಸಿಗುತ್ತದೆ.

ಸ್ಟೀವನ್ ಬ್ಯಾನನ್ ಪ್ರಕಾರ ವಿಶ್ವ ಅದರಲ್ಲೂ ಮುಖ್ಯವಾಗಿ ಪಾಶ್ಚಾತ್ಯ ಸಮಾಜ ನೈತಿಕ ಮತ್ತು ಆರ್ಥಿಕ ಅಧಃಪತನದತ್ತ ಸಾಗುತ್ತಿದೆ. ಬ್ಯಾನನ್ ಗಮನಿಸಿದ ಪ್ರಕಾರ ಸಾಂಪ್ರದಾಯಿಕ ಮೌಲ್ಯಗಳ ಕೊರೆತೆಯಿಂದ ಪಾಶ್ಚಾತ್ಯರು ಎಲ್ಲವನ್ನು ಕಳೆದುಕೊಂಡು ಅಧೋಗತಿಯತ್ತ ಸಾಗುತ್ತಿದ್ದಾರೆ ಎಂದು ವಾದಿಸುತ್ತಿದ್ದ ಬ್ಯಾನನ್, 'ಧರ್ಮ'ದ ಪರಿಕಲ್ಪನೆಯನ್ನು ತಮ್ಮ ವಾದಗಳಲ್ಲಿ ಬಳಸಿಕೊಂಡಿದ್ದರಲ್ಲಿ ಅಚ್ಚರಿಯೇನಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಧರ್ಮದ ಕೊರತೆಯೇ ಪಶ್ಚಿಮಾತ್ಯರು ಇವತ್ತು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಮೂಲ ಮತ್ತು ಸಮಾಜದಲ್ಲಿ ಮತ್ತು ವ್ಯವಸ್ಥೆಯಲ್ಲಿರುವ ಸಮಸ್ಯೆಗಳಿಗೆ ಜನರ ಪ್ರತಿಕ್ರಿಯೆಗಳ ಬಗೆಗೂ ಬ್ಯಾನನ್ ಕಳವಳ ವ್ಯಕ್ತಪಡಿಸುತ್ತಾರೆ. ಮಹಾಭಾರತದ ಅತ್ಯಂತ ಮುಖ್ಯ ಭಾಗ ಕುರುಕ್ಷೇತ್ರ ಯುದ್ಧ ಬರಿಯ ಪಾಂಡವ-ಕೌರವರ ನಡುವಿನ ತಿಕ್ಕಾಟಕ್ಕಷ್ಟೇ ಸೀಮಿತವಾಗದೆ ಶತ ಶತಮಾನಗಳ ಆಧ್ಯಾತ್ಮಿಕ ಆದರ್ಶಗಳಿಗೂ ಸಾಕ್ಷಿಯಾಗಿ ನಿಲ್ಲುತ್ತದೆ. ಧರ್ಮದ ಬಗೆಗಿನ ಸ್ಪಷ್ಟ ನಿದರ್ಶನಗಳು, ಜನಸಾಮಾನ್ಯನಿಗೂ ಅರ್ಥವಾಗುವಂತೆ ವಿವರಿಸುವ ಹೆಗ್ಗಳಿಕೆ ಮಹಾಭಾರತಕ್ಕೆ ಸಲ್ಲುತ್ತದೆ.

ಭಗವದ್ಗೀತೆಯ ನಾಲ್ಕನೇ ಅಧ್ಯಾಯದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಂತೆ "ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ಹೆಚ್ಚುತ್ತದೋ ಆಗ ನಾನು ಸ್ವಯಂ ಅವತಾರ ಮಾಡುತ್ತೇನೆ. ಸಜ್ಜನರನ್ನು ರಕ್ಷಿಸುವುದಕ್ಕಾಗಿಯೂ ದುಷ್ಟರನ್ನು ನಾಶ ಮಾಡುವುದಕ್ಕಾಗಿಯೂ ಮತ್ತು ಧರ್ಮದ ತತ್ವಗಳನ್ನು ಮತ್ತೆ ಸ್ಥಾಪಿಸುವುದಕ್ಕಾಗಿಯೂ ನಾನು ಪ್ರತಿಯುಗದಲ್ಲಿ ಅವತರಿಸುತ್ತೇನೆ." ಭಗವದ್ಗೀತೆಯಲ್ಲಿರುವ ಈ ಕಾಲಜ್ಞಾನದ ಜಗದ್ವಿಖ್ಯಾತ ಸಾಲುಗಳ ಪ್ರತಿಫಲನ ಬ್ಯಾನನ್ ಚಿಂತನೆಗಳಲ್ಲಿ ಮೇಲಿಂದ ಮೇಲೆ ಕಾಣಸಿಗುತ್ತವೆ.  ಬ್ಯಾನನ್ ಹೇಳಿರುವಂತೆ, " ನಾವು ಕ್ರೂರ ಮತ್ತು ರಕ್ತಸಿಕ್ತ ಯುದ್ಧವೊಂದರ ಪ್ರಾರಂಭಿಕ ಹಂತದಲ್ಲಿದ್ದೇವೆ. ನಮ್ಮ ನಂಬಿಕೆಗಳಿಗೋಸ್ಕರ ಈ ಹೋರಾಟ. ನಾವು 2,500 ವರ್ಷಗಳಿಂದ ಕಟ್ಟಿಕೊಂಡದ್ದೆಲ್ಲವನ್ನು ನಾಶಮಾಡಬಲ್ಲ ಹೊಸ ಕ್ರೌರ್ಯವೊಂದರ ವಿರುದ್ಧ ನಾವು ಹೋರಾಡಬೇಕಾಗಿದೆ"ಓರ್ವ ವ್ಯಕ್ತಿ ತನ್ನನ್ನು ತಾನು ಒಂದು ಮಹತ್ತರ ಉದ್ದೇಶದ ಸಾಧನೆಯ ಆಯುಧವಾಗಿ ಪರಿಗಣಿಸಿಕೊಳ್ಳುವ ಈ ಮನಸ್ಥಿತಿ ಭಗವದ್ಗೀತೆಯ ಮೂಲ ವಿಷಯವನ್ನು ನೆನಪಿಸುವಂತಿದೆ. ಸಂಬಂಧಿಕರ ಹತ್ಯೆಯ ಬಗೆಗೆ ಅರ್ಜುನನ ಅನುಮಾನಕ್ಕೆ ಉತ್ತರಿಸುವ ಕೃಷ್ಣ, ನಿನ್ನ ಶತ್ರುಗಳು ಈಗಾಗಲೇ ನನ್ನಿಂದ ನಾಶವಾಗಿದ್ದಾರೆ, ನೀನು ಈ ಯುದ್ಧದಲ್ಲಿ ಒಂದು ನಿಮಿತ್ತ ಮಾತ್ರ ಎನ್ನುವಾಗ, ನಿನ್ನ ಕರ್ಮವನ್ನು ಮಾಡು ಫಲಾಫಲಗಳನ್ನು ನನಗೆ ಬಿಡು ಎಂದಾಗಲೂ ಒಬ್ಬ ವ್ಯಕ್ತಿಯನ್ನು ವಿಶ್ವವ್ಯಾಪಿ ಮಹಾನ್ ಉದ್ದೇಶವೊಂದರ ಭಾಗವನ್ನಾಗಿಸುವ ಪ್ರಯತ್ನವನ್ನು ಗಮನಿಸಬಹುದು.

ಭಗವದ್ಗೀತೆಯಲ್ಲಿ ಸ್ಪಷ್ಟಪಡಿಸಿರುವ ವಿಶ್ವವ್ಯಾಪಿ ರಣರಂಗದ ಪರಿಕಲ್ಪನೆ ಬ್ಯಾನನ್ ಚಿಂತನೆಗಳಲ್ಲಿ ಪುನರಾವರ್ತಿತವಾಗುತ್ತಿದೆ. ಬ್ಯಾನನ್ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಪದೇ ಪದೇ ವಿಶ್ವರಣರಂಗದಲ್ಲಿ ತನ್ನನ್ನು ತಾನು ಧರ್ಮವನ್ನು ರಕ್ಷಿಸುವ ಯೋಧನಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಧರ್ಮದ ಜೊತೆ ಜೊತೆಗೆ ಹಂಟಿಗ್ಟನ್ ರ  ನಾಗರಿಕತೆಗಳ ಸಂಘರ್ಷವೂ ಬ್ಯಾನನ್ ಯೋಜನೆಗಳ ತಳಹದಿ ರೂಪಿಸುತ್ತಿವೆ. ಸ್ಟೀವ್ ಬ್ಯಾನನ್ ಭಗವದ್ಗೀತೆಯಿಂದ ಪ್ರಭಾವಿತನಾಗಿರುವ ಪರಿ, ಜಾಗತಿಕ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಹೊಸ ದೃಷ್ಟಿಕೋನದೊಂದಿಗೆ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಹುಟ್ಟಿಸಿದೆ.

(This article was published in Hosa Digantha Newsapaper on 9 February 2017)






      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ