ಶುಕ್ರವಾರ, ಮೇ 13, 2016

ಕಾಶ್ಮೀರ: ಉಗ್ರರಿಗೆ ಜನ ಬೆ೦ಬಲ ಕಡಿಮೆಯಾಗಿಲ್ಲ

ಭಾರತೀಯ ಸೇನೆಯ ಮೇಲಿನ ಹಲವು ದಾಳಿಗಳಿಗೆ ಕಾರಣನಾಗಿದ್ದ ಲಶ್ಕರ್  ತೊಯ್ಬಾ ಉಗ್ರ ಸಂಘಟನೆಯ ಅಬು ಕಾಸಿಮ್ ಕಳೆದ ಅಕ್ಟೋಬರ್ ನಲ್ಲಿ ಹತನಾದಾಗಅವನ ಅಂತ್ಯಕ್ರಿಯೆಯಲ್ಲಿ ಸಾಗರದಂತೆ ಜನ ಒಟ್ಟುಗೂಡಿದ್ದರುಉಗ್ರರ ಅಂತ್ಯಕ್ರಿಯೆಯಲ್ಲಿ ಗನ್ ಸೆಲ್ಯೂಟ್ ಗಳು ಕಾಶ್ಮೀರದಲ್ಲಿ ಸಾಮಾನ್ಯವೆನಿವಷ್ಟು ಹೆಚ್ಚಾಗಿ ಹೋಗಿದೆ.
- ಕೀರ್ತಿರಾಜ್



ಸ್ವಾತಂತ್ರ್ಯದ ಸಂಭ್ರಮದೊಂದಿಗೆ ಬಳುವಳಿಯಾಗಿ ಬಂದ ಅನೇಕ ಸಮಸ್ಯೆಗಳಲ್ಲಿ ಕಾಶ್ಮೀರ ವಿವಾದವೂ ಒಂದು. ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಹಲವಾರು ತಕರಾರುಗಳಿದ್ದರೂ, ದಶಕಗಳಿಂದ ಎರಡೂ ರಾಷ್ಟ್ರಗಳನ್ನೂ ಬಿಟ್ಟೂ ಬಿಡದಂತೆ ಕಾಡುತ್ತಿರುವುದು ಕಾಶ್ಮೀರ ಸಮಸ್ಯೆ. 1947ರಲ್ಲಿ ಭಾರತೀಯ ಉಪಖಂಡದ ವಿಭಜನೆಯೊಂದಿಗೆ ಕಾಡತೊಡಗಿದ ಕಾಶ್ಮೀರದಲ್ಲಿನ ಹಿಂಸಾಚಾರ 1980 ಮತ್ತು 90 ದಶಕದಲ್ಲಿ ಮಿತಿಮೀರಿ ಹೋಗಿತ್ತು. ನಂತರ ಅಟಲ್ ಬಿಹಾರಿ ವಾಜಪೇಯಿಯವರ ಆಡಳಿತಾವಧಿಯಲ್ಲಿ ಕಾಶ್ಮೀರದ ದಂಗೆ ಮತ್ತು ಹಿಂಸಾಚಾರಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ಪ್ರಯತ್ನಗಳೂ ನಡೆದಿದ್ದವು. ಆದರೆ ಇತ್ತೀಚಿನ ಕೆಲವು ವಿದ್ಯಮಾನಗಳಿಂದಾಗಿ ಕಾಶ್ಮೀರದಲ್ಲಿ ಶಾಂತಿಯುತ ಪರಿಹಾರದ ಸಾಧ್ಯತೆಗಳು ಕ್ಷೀಣಿಸುತ್ತಿವೆ. ಕಾಶ್ಮೀರದ ಸಾಮಾನ್ಯ ಜನತೆ ಕೂಡ ದಂಗೆಕೋರ ಗುಂಪುಗಳಿಗೆ ಸಹಾನುಭೂತಿ ವ್ಯಕ್ತ ಪಡಿಸುತ್ತಿರುವುದು ಭಾರತದ ಪಾಲಿಗೆ ಕಾಶ್ಮೀರ ಕೈ ತಪ್ಪಿ ಹೋಗುತ್ತಿರುವ ಬಗ್ಗೆ ಎಚ್ಚರಿಕೆಯ ಘಂಟೆಯೇ ಸರಿ.

1947 ಭಾರತ ಪಾಕಿಸ್ತಾನ ವಿಭಜನೆಯ ಬೆನ್ನಲ್ಲೇ ಕಾಶ್ಮೀರಕ್ಕೋಸ್ಕರ ನಡೆದ ಸಂಘರ್ಷ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ಯುದ್ಧವಿರಾಮದೊಂದಿಗೆ ಬೂದಿ ಮುಚ್ಚಿದ ಕೆಂಡವಾಯಿತು. ಎರಡೂ ಕಡೆಯ ಸೈನ್ಯಗಳೂ ವಿಶ್ವಸಂಸ್ಥೆಯ ಘೋಷಿಸಿದ ಗಡಿ ನಿಯಂತ್ರಣ ರೇಖೆ(LOC)ಯಲ್ಲಿ ತಟಸ್ಥವಾಗಬೇಕಾಯಿತು. ಪಾಕಿಸ್ತಾನ ಆಕ್ರಮಿಸಿಕೊಂಡ ಕಾಶ್ಮೀರದ ಭಾಗವನ್ನು ಆಜಾದ್ ಕಾಶ್ಮೀರ್ ಎಂದು ಕರೆದುಕೊಡರೆ, ಭಾರತ ಪಾಕ್ ಆಕ್ರಮಿತ ಕಾಶ್ಮೀರ (POK) ಎಂದು ಗುರುತಿಸಿತು. ಅಂದಿನಿಂದ ಇವತ್ತಿನವರೆಗೂ ಪ್ರತ್ಯೇಕತಾವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನ ಪಡುತ್ತಲೇ ಇದ್ದಾರೆ. 1980 ದಶಕದಲ್ಲಿ ಪಾಕಿಸ್ತಾನದಿಂದ  ಪ್ರತ್ಯೇಕತಾವಾದಿಗಳ ಪ್ರಯತ್ನಗಳು ಸಶಸ್ತ್ರ ಬಂಡಾಯವಾಗಿ ಮಾರ್ಪಟ್ಟಿತು. ಭಾರತೀಯ ಸೇನೆ ನಿರ್ದಯವಾಗಿ ದಂಗೆಯನ್ನು ಹತ್ತಿಕ್ಕಿದ್ದು ಈಗ ಇತಿಹಾಸ. 1980 ಮತ್ತು 90 ದಶಕದ ರಕ್ತಸಿಕ್ತ ದಂಗೆಗಳು ಸಾವಿರಾರು ಪ್ರಾಣಬಲಿ ಪಡೆದುಕೊಂಡರೂ, ನಂತರ ವಾಜಪೇಯಿಯವರ ಆಡಳಿತಾವಧಿಯ ಶಾಂತಿಯುತ ಮಾತುಕತೆಗಳು ಮತ್ತೆ ಕಾಶ್ಮೀರದಲ್ಲಿ ಹೊಸ ಸಂಚಲನ ಮೂಡಿಸಿತ್ತು. ವಾಜಪೇಯಿಯವರ ಸತತ ಪ್ರಯತ್ನಗಳ ಫಲವೇ 1999 ಲಾಹೋರ್ ಸೌಹಾರ್ದದ ಘೋಷಣೆ. ಪ್ರತ್ಯೇಕತಾವಾದಿ ಹರಿಯತ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಗುಂಪುಗಳನ್ನೂ ಮಾತುಕತೆಗೆ ಕರೆತಂದಿದ್ದು ವಾಜಪೇಯಿ ನಾಯಕತ್ವದ ಹೆಗ್ಗಳಿಕೆ. ವಾಜಪೇಯಿಯವರ ಶ್ರಮ ಮುಂದಿನ ಕೆಲವು ವರ್ಷಗಳ ಕಾಲ ಕಾಶ್ಮೀರ ಪ್ರಶಾಂತವಾಗಿ ಪ್ರವಾಸೋದ್ಯಮ ಮತ್ತು ವ್ಯಾಪಾರದ ಬೆಳವಣಿಗೆಗೂ ಪೂರಕವಾಯಿತು.

ಅಜಾತಶತ್ರು ವಾಜಪೇಯಿ ಕಾಲದಲ್ಲಿ ಪ್ರಶಾಂತವಾಗಿದ್ದ ಕಾಶ್ಮೀರದಲ್ಲಿ ಮತ್ತೆ ಅಶಾಂತಿಯ ಕಿಡಿ ಹಚ್ಚಿದ್ದು 2010 ದಂಗೆ. ದಂಗೆಯಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಅನೇಕರು ಉನ್ನತ ವರ್ಗದ ಕುಟುಂಬಗಳ ವಿದ್ಯಾವಂತರ ಸಂಖ್ಯೆ ಹೆಚ್ಚಿತ್ತು ಎಂಬುದು ಗಮನಿಸಲೇ ಬೇಕಾದ ವಿಷಯ. ಹಿಜ್ಬುಲ್ ಮುಜಾಹಿದ್ದೀನ್ ಸಾಮಾನ್ಯ ಜನಮಾನಸದಲ್ಲಿ ಬೆಂಬಲ ಗಳಿಸಿಕೊಂಡದ್ದಕ್ಕೆ, ಫೇಸ್ ಬುಕ್ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ 2010 ದಂಗೆಯ ರೂವಾರಿ ಬುರ್ಹಾನ್ ಮುಜಾಪ್ಪರ್ ವಾನಿ ಪಡೆಯುತ್ತಿದ್ದ ಸಹಾನುಭೂತಿ ಮತ್ತು ಬೆಂಬಲವೇ ಸಾಕ್ಷಿ. 2011ರಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮ ಪ್ರಾಂತ್ಯದಲ್ಲಿ ಭಾರತೀಯ ಸೇನೆ ದಂಗೆಕೋರರೊಂದಿಗೆ ಸೆಣಸಾಡುತ್ತಿದ್ದಾಗ, ಸ್ಥಳೀಯ ನಿವಾಸಿಗಳು ಸೇನೆಯ ಮೇಲೆ ಕಲ್ಲು ಮತ್ತು ಇಟ್ಟಿಗೆಗಳನ್ನೆಸೆದು ದಂಗೆಕೋರರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು! ಇದಾದ ನಂತರ ಸೆಕ್ಷನ್ 144 ಪ್ರಕಾರ 'ಎನ್ ಕೌಂಟರ್ ಸೈಟ್' (Encounter site) ಗಳಿಂದ 1.2 ಮೈಲಿಗಳ ವ್ಯಾಪ್ತಿಯಲ್ಲಿ ಜನ ಗುಂಪುಗೂಡುವುದನ್ನು ನಿಷೇಧಿಸಲಾಗಿತ್ತು. ಅದರೆ ಸೆಕ್ಷನ್ 144 ಜಾರಿಯಾದ ಕೆಲವೇ ದಿನಗಳಲ್ಲಿ ಸ್ಥಳೀಯರು ಅದನ್ನು ಧಿಕ್ಕರಿಸಿ ಪಂಪೋರ್ ಪಟ್ಟಣದಲ್ಲಿ ಮತ್ತೆ ಭಾರತೀಯ ರಕ್ಷಣಾ ದಳಗಳ ಮೇಲೆ ಕಲ್ಲೆಸೆದಿದ್ದರು. ಇವೆಲ್ಲವುಗಳನ್ನು ಗಮನಿಸಿದಾಗ ಭಾರತದ ಕಾಶ್ಮೀರ ನೀತಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಭಾರತೀಯ ಸೇನೆಯ ಮೇಲಿನ ಹಲವು ದಾಳಿಗಳಿಗೆ ಕಾರಣನಾಗಿದ್ದ ಲಶ್ಕರ್ ತೊಯ್ಬಾ ಉಗ್ರ ಸಂಘಟನೆಯ ಅಬು ಕಾಸಿಮ್ ಕಳೆದ ಅಕ್ಟೋಬರ್ ನಲ್ಲಿ ಹತನಾದಾಗ, ಅವನ ಅಂತ್ಯಕ್ರಿಯೆಯಲ್ಲಿ ಸಾಗರದಂತೆ ಜನ ಒಟ್ಟುಗೂಡಿದ್ದರು! ಮುಂದೆ ನವೆಂಬರ್ ನಲ್ಲಿ ಕುಪ್ವಾರದಲ್ಲಿ ಸೇನೆ ಮತ್ತು ಉಗ್ರರ ಮಧ್ಯೆ ನಡೆದ 27 ದಿನಗಳ ಸಂಘರ್ಷದಲ್ಲಿ ಇಬ್ಬರು ಸೈನಿಕರು ವೀರ ಮರಣ ಹೊಂದಿದರೆ ಆರು ಜನ ಗಾಯಾಳುಗಳಾಗಿದ್ದರು. ಶ್ರೀನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತದ ಸೇನಾಧಿಕಾರಿಯ ಪ್ರಕಾರ ಉಗ್ರರಿಗೆ ಎಲ್ಲಾ ಸೌಲಭ್ಯಗಳನ್ನು ಸರಬರಾಜು ಮಾಡಿದ್ದು ಸ್ಥಳೀಯ ಜನತೆ! ಉಗ್ರರ ಅಂತ್ಯಕ್ರಿಯೆಯಲ್ಲಿ ಗನ್ ಸೆಲ್ಯೂಟ್ ಗಳು ಕಾಶ್ಮೀರದಲ್ಲಿ ಸಾಮಾನ್ಯವೆನಿವಷ್ಟು ಹೆಚ್ಚಾಗಿ ಹೋಗಿದೆ. ಆಘಾತಕಾರಿ ವಿದ್ಯಮಾನಗಳು ಭಾರತದಿಂದ ಕಾಶ್ಮೀರ ನಿಧಾನವಾಗಿ ದೂರವಾಗುತ್ತಿರುವ ಸೂಚನೆ ನೀಡುತ್ತಿದೆ. ದಿನೇ ದಿನೇ ಕಾಶ್ಮೀರದಲ್ಲಿ ಭಾರತ ವಿರೋಧಿ ಭಾವನೆಗಳು ಹೆಚ್ಚಾಗುತ್ತಿವೆ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆಗಳು ಬೇಕಿಲ್ಲ. ಕಾಶ್ಮೀರದಲ್ಲಿ ಮತ್ತೆ ಜನಬೆಂಬಲ ಗಳಿಸಿಕೊಳ್ಳಲು ಇನ್ನೂ ಬಹಳದ ದೂರದ ದಾರಿ ಕ್ರಮಿಸಬೇಕಾಗಿದೆ. ಕಾಶ್ಮೀರ ಕಡೆಗಿನ ಭಾರತದ ರಾಜತಾಂತ್ರಿಕತೆಯಲ್ಲಿ ವಾಜಪೇಯಿ ಕಾಶ್ಮೀರ ನೀತಿಯಲ್ಲಿ ತೋರಿದ ಪ್ರಬುದ್ಧತೆಯ ಅವಶ್ಯಕತೆಯಿದೆ. ಮೋದಿ ಕಾಶ್ಮೀರ ಸಮಸ್ಯೆಗೊಂದು ಪರಿಹಾರ ಕಂಡುಕೊಂಡಲ್ಲಿ ವರೆಗೆ ಸಾಧಿಸಿದ ವಿದೇಶಾಂಗ ನೀತಿಯ ಯಶಸ್ಸುಗಳ ಸಾಲಲ್ಲಿ ಕಾಶ್ಮೀರ ಮುಕುಟ ಮಣಿಯಂತೆ ಶೋಭಿಸುವುದರಲ್ಲಿ ಸಂಶಯವಿಲ್ಲ.





 KEERTHIRAJ (keerthiraj886@gmail.com)

·   Currently serving as a Faculty for International Relations and Political Science at Alliance University, Bangalore. 
      (This article was published in Hosa Diganta newspaper on 12 May 2016)





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ