ಶುಕ್ರವಾರ, ಮಾರ್ಚ್ 31, 2017

ಲಂಡನ್ ದಾಳಿ ಮತ್ತು ಒಂಟಿ ತೋಳದ ಕಟ್ಟುಕತೆ

ಉಗ್ರ ದಾಳಿ ಪ್ರಕರಣಗಳಲ್ಲಿ ಸರಕಾರಗಳು ಮತ್ತು ಸಂಬಂಧಪಟ್ಟ ಇಲಾಖೆಗಳು 'ಒಂಟಿ ತೋಳದ ಕಟ್ಟುಕತೆ'ಯನ್ನು ಬಳಸಿ ಜವಾಬ್ದಾರಿ ಕಳೆದುಕೊಳ್ಳಬಹುದು. ಆದರೆ ದೀರ್ಘಕಾಲೀನ ಉಗ್ರ ನಿಗ್ರಹ ಪ್ರಯತ್ನಗಳಿಗೆ ಈ ಪರಿಕಲ್ಪನೆ ಶಾಪವಾಗಿ ಕಾಡುವ ಸಾಧ್ಯತೆಗಳಿವೆ
-      ಕೀರ್ತಿರಾಜ್


22 ಮಾರ್ಚ್ ಬ್ರಿಟಿಷ್ ಸಂಸತ್ತಿನ ಸನಿಹದಲ್ಲಿ ಉಗ್ರ ದಾಳಿಯೊಂದಕ್ಕೆ ಸಾಕ್ಷಿಯಾಗುತ್ತದೆ. ಲಂಡನ್ನಿನ ವೆಸ್ಟ್ ಮಿನಸ್ಟರ್ ಸೇತುವೆಯ ಬಳಿ ಜನರ ಮೇಲೆಯೇ ಕಾರೊಂದನ್ನು ಚಲಾಯಿಸಿಕೊಂಡು ಖಾಲಿದ್ ಮಸೂದ್ ಎಂಬ ಬ್ರಿಟಿಷ್ ಪ್ರಜೆಯೊಬ್ಬ ಸಂಸತ್ತಿನ ರಕ್ಷಣೆಯ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬನನ್ನು ಚೂರಿಯಿಂದ ತಿವಿದು ಕೊಲ್ಲುತ್ತಾನೆ. ಒಟ್ಟಾರೆ ಈ ಪ್ರಕರಣ ಮಸೂದ್ ನನ್ನೂ ಒಳಗೊಂಡಂತೆ ನಾಲ್ಕು ಜನರ ಸಾವು ಮತ್ತು ಐವತ್ತಕ್ಕೂ ಹೆಚ್ಚು ಜನರನ್ನು ಗಾಯಾಳುಗಳನ್ನಾಗಿಸುತ್ತದೆ. ಈ ಹಿಂದೆಯೂ ವಾಹನಗಳನ್ನು ಬಳಸಿ ಲಂಡನ್ ದಾಳಿಯನ್ನೇ ಹೋಲುವಂಥಾ ಉಗ್ರ ದಾಳಿಗಳಾಗಿವೆ. ಕಳೆದ ವರ್ಷ 2016ರಲ್ಲಿ ಬರ್ಲಿನ್ ಮತ್ತು ನೀಸ್ ಗಳಲ್ಲಿ ಜನರ ಗುಂಪನ್ನು ಗುರಿಯಾಗಿರಿಸಿಕೊಂಡು ದೊಡ್ಡ ವಾಹನಗಳನ್ನು ಬಳಸಿ ಮಾರಣಹೋಮ ನಡೆಸಲಾಗಿತ್ತು. ಇಂಥಾ ದಾಳಿಗಳನ್ನು ಭಯೋತ್ಪಾದನಾ ನಿಗ್ರಹ ಪರಿಣತರು ಮತ್ತು ಮಿಲಿಟರಿ ಗುರುತಿಸುವುದು 'ಒಂಟಿ ತೋಳದ ದಾಳಿ' ( Lone Wolf Attack). ಯಾವುದೇ ಬಾಹ್ಯ ಗುಂಪಿನ ನೆರವು ಅಥವಾ ಆದೇಶಗಳಿಲ್ಲದೇ, ತನ್ನಿಂದ ತಾನೇ ಪ್ರೇರೇಪಿತನಾಗಿ ಉಗ್ರ ಕೃತ್ಯಗಳನ್ನು ಎಸಗುವ ಏಕಾಂಗಿ ವ್ಯಕ್ತಿಯನ್ನು 'ಒಂಟಿ ತೋಳ' ಎಂದೂ, ಹೆಚ್ಚಿನ ಯೋಜನೆಗಳಿಲ್ಲದೆ ಹಠಾತ್ತನೆ ನಡೆಯುವ ಈ ಪ್ರಕರಣಗಳನ್ನು 'ಒಂಟಿ ತೋಳದ ದಾಳಿ' ಎಂದೂ ಗುರುತಿಸಲಾಗುತ್ತದೆ. ಲಂಡನ್ ದಾಳಿಯೂ ಕೂಡ ಇದೇ ಹಣೆಪಟ್ಟಿ ಹಚ್ಚಿಕೊಳ್ಳಲು ಸಿದ್ಧವಾಗಿರುವಂತೆ, ಈ ಒಂಟಿ ತೋಳದ ಪರಿಕಲ್ಪನೆಗೆ ವಿರೋಧಗಳೂ ವ್ಯಕ್ತವಾಗಿವೆ. ಉಗ್ರರನ್ನು ಒಂಟಿ ತೋಳವೆಂದು ಪರಿಗಣಿಸುವ ತತ್ವದಿಂದಾಗಿ ಭಯೋತ್ಪಾದನಾ ನಿಗ್ರಹ ಇನ್ನಷ್ಟು ಹದಗೆಡಲಿದೆ ಮತ್ತು ಈ ಎಲ್ಲಾ ದಾಳಿಗಳ ಹಿಂದೆ ಬಹುಕಾಲದ ಕರಾರುವಕ್ ಯೋಜನೆ ಮತ್ತು ದೊಡ್ಡದೊಂದು ಉಗ್ರ ಜಾಲ ಕಾರ್ಯನಿರ್ವಹಿಸುತ್ತದೆ ಮತ್ತು 'ಒಂಟಿ ತೋಳದ ದಾಳಿ' ಎಂಬ ಹಣೆಪಟ್ಟಿ ಈ ಎಲ್ಲಾ ಪುರಾವೆಗಳನ್ನು ಕಡೆಗಣಿಸುವುದರ ಮೂಲಕ ಭದ್ರತಾ ವೈಫಲ್ಯಗಳಿಗೆ ದಾರಿಮಾಡಿಕೊಡುವ ಸಾಧ್ಯತೆಗಳೂ ಇಲ್ಲದ್ದಿಲ್ಲ.

ಇತ್ತೀಚೆಗೆ ಬರ್ಮಿಂಗ್ ಹ್ಯಾಮ್ ನಲ್ಲಿ ವಾಸಿಸುತ್ತಿದ್ದ ಲಂಡನ್ ದಾಳಿಯ ದುಷ್ಕರ್ಮಿ  52 ವರ್ಷದ ಖಾಲಿದ್ ಮಸೂದ್ ನ ಮೂಲ ಹೆಸರು ಆಡ್ರಿಯಾನ್ ರಸೆಲ್ ಎಲ್ಮ್ಸ್. ನಂತರ ಇಸ್ಲಾಮಿಗೆ ಮತಾಂತರವಾಗಿದ್ದ ಈತನಿಗೆ ಮದುವೆಯಾಗಿ ಮಕ್ಕಳೂ ಇದ್ದರು. ಈ ಹಿಂದೆಯೂ ಒಂದು ಬಾರಿ ಈತ ಪೊಲೀಸ್ ವಿಚಾರಣೆಗೆ ಒಳಗಾಗಿದ್ದನಾದರೂ, ಈತನಿಂದ ಯಾವುದೇ ತೊಂದರೆಯಿಲ್ಲ ಎಂದು ಪೊಲೀಸರಿಗೆ ನಂಬಿಸುವಲ್ಲಿ ಯಶಸ್ವಿಯಾಗಿದ್ದ! ಲಂಡನ್ ದಾಳಿಯಾದ ತಕ್ಷಣ ಕಾರ್ಯಪ್ರವೃತ್ತರಾದ ಲಂಡನ್ ಪೊಲೀಸರು ಬರ್ಮಿಂಗ್ ಹ್ಯಾಮ್ ಮತ್ತು ಲಂಡನ್ ನಲ್ಲಿ ಮೂರು ಮಹಿಳೆಯರನ್ನೂ ಒಳಗೊಂಡಂತೆ ಹನ್ನೊಂದು ಜನರನ್ನು ಬಂಧಿಸುತ್ತಾರೆ. ಇದರೊಂದಿಗೆ ಸ್ಪಷ್ಟವಾದ ವಿಚಾರವೇನೆಂದರೆ ಲಂಡನ್ ದಾಳಿಯಲ್ಲಿ ಖಾಲಿದ್ ಮಸೂದ್ ಏಕಾಂಗಿಯಾಗಿರಲಿಲ್ಲ. ಬರ್ಮಿಂಗ್ ಹ್ಯಾಮ್, ಇಸ್ಲಾಮಿಕ್ ಸ್ಟೇಟ್ ಉಗ್ರರ ನೇಮಕಾತಿ ಪ್ರದೇಶವೆಂದು ಕುಖ್ಯಾತಿ ಪಡೆದಿದೆ. ಖಾಲಿದ್ ಮಸೂದ್ ಈ ಹಿಂದೆ ವಾಸವಾಗಿದ್ದ ಲಂಡನ್ನಿನ ಉತ್ತರದಲ್ಲಿರುವ ಲ್ಯುಟನ್ ಪಟ್ಟಣದಲ್ಲೂ ಉಗ್ರರ ಪ್ರಭಾವ ಹೇರಳವಾಗಿದೆ. ಲಂಡನ್ ದಾಳಿಯಾದ ಕೆಲವೇ ಗಂಟೆಗಳ ಬಳಿಕ ಅನ್ಸಾರ್ ಅಲ್ ಮುಜಾಹಿದ್ದೀನ್ ಗುಂಪು ತನ್ನ ಆನ್ ಲೈನ್ ಫೋರಮ್ ನಲ್ಲಿ ಈ ಕೃತ್ಯದ ಹೊಣೆ ಹೊತ್ತುಕೊಳ್ಳುತ್ತದೆ. ಈ ಗುಂಪು ಇಸ್ಲಾಮಿಕ್ ಸ್ಟೇಟ್ ನೊಂದಿಗೆ ಗುರುತಿಸಿಕೊಂಡಿದೆಯಷ್ಟೇ ಅಲ್ಲದೇ ದಾಳಿಯಾದ ಮರುದಿನ ಇಸ್ಲಾಮಿಕ್ ಸ್ಟೇಟ್ ನ ವಾರ್ತಾ ವಿಭಾಗ 'ಅಮಾಕ್' ಖಾಲಿದ್ ಮಸೂದ್ ನನ್ನು "ಇಸ್ಲಾಮಿಕ್ ಸ್ಟೇಟ್ ನ ಯೋಧ" ಎಂದು ಗುರುತಿಸಿತ್ತು. ಹೀಗೆ ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಪರಿಭಾವಿಸಿದ ಕ್ಷಣದಲ್ಲೇ ಆ ಪ್ರಕರಣ ಹಳ್ಳ ಹಿಡಿಯುತ್ತವೆ. ಇದೇ ಮಾದರಿಯಲ್ಲಿ ಇತ್ತೀಚಗೆ ನಡೆದ ಬರ್ಲಿನ್ ಮತ್ತು ನೀಸ್ ದಾಳಿಗಳನ್ನು ಗಮನಿಸಿದಲ್ಲಿ ಈ ಪ್ರಕರಣದ ರಹಸ್ಯ ಚುಕ್ಕೆಗಳನ್ನು ಜೋಡಿಸುವುದು ಕಷ್ಟಸಾಧ್ಯವೇನಲ್ಲ.
Image may contain: 1 person19 ಡಿಸೆಂಬರ್ 2016ರಂದು ಅನಿಸ್ ಅಮ್ರಿ ಎಂಬ ಟ್ಯುನಿಸಿಯನ್ ಉಗ್ರನೊಬ್ಬ ಟ್ರಕ್ ಒಂದನ್ನು ಬರ್ಲಿನ್ ನ ಮಾರುಕಟ್ಟೆಯೊಂದಕ್ಕೆ ನುಗ್ಗಿಸಿ ಹನ್ನೆರಡು ಜನರ ಸಾವಿಗೆ ಕಾರಣನಾಗಿದ್ದ. ಮೇಲ್ನೋಟಕ್ಕೆ ಇದು ಏಕಾಂಗಿಯಾಗಿ ಮಾಡಿದ ಕೃತ್ಯ ಅಥವಾ ಒಂಟಿ ತೋಳದ ದಾಳಿಯಂತಿದ್ದರೂ, ವಾಸ್ತವವಾಗಿ ಆ ದಾಳಿಯ ಹಿಂದೆ ಇಟಲಿ ಮೂಲದ ಇಸ್ಲಾಮಿಕ್ ಸ್ಟೇಟ್ ಮತ್ತು ಸ್ಥಳೀಯ ಉಗ್ರ ಜಾಲಗಳ ವ್ಯವಸ್ಥಿತ ಸಂಚಿತ್ತು! ದಾಳಿಯ ನಂತರದಲ್ಲಿ ಸಿಸಿಟಿವಿ ಕ್ಯಾಮರದಲ್ಲಿ ಅಮ್ರಿ ತನ್ನ ತೋರುಬೆರಳನ್ನು ತೋರಿಸಿ, ಇಸ್ಲಾಮಿಕ್ ಸ್ಟೇಟ್ ನ ವಿಶಿಷ್ಟ ಸಂಕೇತವನ್ನು ಪ್ರದರ್ಶಿಸಿದ್ದು ಸ್ಪಷ್ಟವಾಗಿತ್ತು. ದಾಳಿಯಾಗಿ ನಾಲ್ಕು ದಿನಗಳ ನಂತರ ಡಿಸೆಂಬರ್ 23ರಂದು ಮಿಲಾನ್ ನಗರದಲ್ಲಿ ಅಮ್ರಿ ಪೊಲೀಸ್ ಗುಂಡಿಗೆ ಬಲಿಯಾಗುತ್ತಾನೆ. ಇದಾದ ಬಳಿಕ ಬರ್ಲಿನ್ ದಾಳಿ ಒಂಟಿ ತೋಳದ ದಾಳಿಯಲ್ಲ ಎನ್ನುವುದು ರುಜುವಾತಾಗುತ್ತಾ ಸಾಗುತ್ತದೆ. ಅನಿಸ್ ಅಮ್ರಿಯ ಸಾವಿನ ನಂತರ ಇಸ್ಲಾಮಿಕ್ ಸ್ಟೇಟ್, ಆತ ತಮ್ಮ ಖಲೀಫ ಅಲ್ ಬಗ್ದಾದಿಗೆ ವಿಧೇಯನಾಗಿದ್ದ ಎಂಬ ಪುರಾವೆ ಒದಗಿಸುವಂಥ ವಿಡಿಯೋ ಬಿಡುಗಡೆ ಮಾಡುತ್ತದೆ. ಮತ್ತು ಅನಿಸ್ ಅಮ್ರಿ 'ಉಮ್ಮಾ'ಗೋಸ್ಕರ ಹುತಾತ್ಮನಾದ ವ್ಯಕ್ತಿ ಎಂದು ಬಿಂಬಿಸುತ್ತದೆ(ಜಿಹಾದಿಗಳು ಮತ್ತು ಇಸ್ಲಾಮಿಸ್ಟ್ ಗಳು 'ಮುಸ್ಲಿಂ ರಾಷ್ಟ್ರ'ಕ್ಕೆ ಸಮಾನಾರ್ಥಕವಾಗಿ 'ಉಮ್ಮಾ' ಎಂಬ ಪದ ಬಳಸುತ್ತಾರೆ). ಬರ್ಲಿನ್ ನಲ್ಲಿದ್ದ ಮಸೀದಿಯೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ನೇಮಕಾತಿ ನಡೆಯುತ್ತದೆ ಎಂಬ ಸಂದೇಹದ ಮೇಲೆ ಜರ್ಮನ್ ಅಧಿಕಾರಿಗಳು ಆ ಮಸೀದಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಬರ್ಲಿನ್ ನಲ್ಲಿ ರಕ್ತದೋಕುಳಿ ನಡೆಸಿದ ಅಮ್ರಿ ದಾಳಿಗೆ ಮೊದಲು ಈ ಮಸೀದಿಗೆ ಭೇಟಿ ನೀಡಿದ್ದ. ಇಟಲಿಯಲ್ಲೂ ಕೂಡ ಅನೇಕ ಟ್ಯೂನಿಶಿಯನ್ ಪ್ರಜೆಗಳನ್ನು ಗಡಿಪಾರು ಮಾಡಲಾಗುತ್ತದೆ. ಈ ರೀತಿಯಾಗಿ ಬರ್ಲಿನ್ ದಾಳಿ ಒಂದು ವ್ಯವಸ್ಥಿತ ದಾಳಿಯಾಗಿತ್ತು ಎಂಬ ಸತ್ಯ ಬೆಳಕಿಗೆ ಬರುತ್ತದೆ.

14 ಜೂನ್ , 2016ರಂದು ಫ್ರಾನ್ಸಿನ ನೀಸ್ ನಗರ ಫ್ರೆಂಚರ ರಾಷ್ಟ್ರೀಯ ಸಂಭ್ರಮಾಚರಣೆ ಕಾರಾಗ್ರಹ ದಿನಾಚರಣೆಯ ( Bastille Day) ಸಂಭ್ರಮದಲ್ಲಿದ್ದಾಗ, ಮಹಮ್ಮದ್ ಲಾಹೊಜ್ ಬೌಹ್ಲೆಲ್ ಎಂಬ ಉಗ್ರನೊಬ್ಬ ಜನರ ಮೇಲೆ ಟ್ರಕ್ ಅನ್ನು ಅಡ್ಡಾದಿಡ್ಡಿ ಚಲಾಯಿಸುತ್ತಾನೆ. 84 ಜನ ಸಾವನ್ನಪ್ಪಿದರೆ 400 ಜನ ಗಾಯಾಳುಗಳಾಗಿ ಆಸ್ಪತ್ರೆ ಸೇರುತ್ತಾರೆ. ಫ್ರೆಂಚ್ ಪೊಲೀಸರು ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಘೋಷಿಸುತ್ತಾರೆ. ಅದರೆ ಐದು ವಾರಗಳ ನಂತರ ಫ್ರಾಂಕಾಯ್ಸ್ ಮಾಲಿನ್ಸ್, ನೀಸ್ ದಾಳಿಯ ಹಿಂದೆ ಜಿಹಾದಿಸ್ಟ್ ಗುಂಪುಗಳು ಹಲವು ತಿಂಗಳುಗಳು ವ್ಯವಸ್ಥಿತವಾಗಿ ಕಾರ್ಯವೆಸಗಿದ್ದನ್ನು ಸಾಕ್ಷಿ ಸಮೇತ ರುಜುವಾತುಪಡಿಸಿದ್ದರು. ಇದಾದ ನಂತರ ಈ ದಾಳಿಯ ಹೊಣೆ ಹೊತ್ತ ಇಸ್ಲಾಮಿಕ್ ಸ್ಟೇಟ್, ದಾಳಿಗೆ ಕಾರಣನಾದ ದುಷ್ಕರ್ಮಿ ತನ್ನ ತೋರುಬೆರಳನ್ನು ಮೇಲೆತ್ತಿ ಇಸ್ಲಾಮಿಕ್ ಸ್ಟೇಟ್ ಸಂಕೇತ ಪ್ರದರ್ಶಿಸುವ ಚಿತ್ರಗಳನ್ನು ಬಿಡುಗಡೆ ಮಾಡಿದ್ದರು. ಫ್ರೆಂಚ್ ಸರಕಾರ ಮತ್ತು ಪೊಲೀಸರು ಆತುರದಿಂದ ಈ ದಾಳಿಯನ್ನು ಒಂಟಿ ತೋಳದ ದಾಳಿ ಎಂದು ಘೋಷಿಸಿದ್ದರಾದರೂ ಈ ಮಾರಣಹೋಮ ಒಬ್ಬ ವ್ಯಕ್ತಿಯ ಕೆಲಸವಾಗಿರಲಿಲ್ಲ ಎನ್ನುವುದು ತಡವಾಗಿಯಾದರೂ ಅರಿವಾಗುತ್ತದೆ.

ಇಷ್ಟಕ್ಕೂ ಆಯಾ ದೇಶದ ಸರಕಾರ, ಪೊಲೀಸ್, ಗುಪ್ತಚರ ಅಥವಾ ಇನ್ನಿತರ ಭದ್ರತಾ ಪಡೆಗಳು, ಇಂಥ ದಾಳಿಗಳು ನಡೆದ ಕೂಡಲೇ  'ಒಂಟಿ ತೋಳದ ದಾಳಿ' ಎಂಬ ಹಣೆಪಟ್ಟಿ ಕಟ್ಟಲು ಕಾರಣಗಳೂ ಇವೆ. ಇಂಥ ದಾಳಿಗಳಾದ ಕೂಡಲೇ, ಭದ್ರತಾ ವಿಫಲತೆ, ಗುಪ್ತಚರ ವೈಫಲ್ಯ ಮೊದಲಾದ ಪ್ರಶ್ನೆಗಳ ಸುರಿಮಳೆಯಿಂದಾಗಿ ಪೇಚಿಗೆ ಸಿಲುಕುವ ಸರಕಾರಕ್ಕೆ ಹುಲ್ಲುಕಡ್ಡಿಯಂತೆ ಆಸರೆಯಾಗುವುದು ಇದೇ 'ಒಂಟಿ ತೋಳದ ದಾಳಿ ತತ್ವ'! ಉದಾಹರಣೆಗೆ ಲಂಡನ್ ದಾಳಿಯಾದ ನಂತರ ಬ್ರಿಟಿಷ್ ರಕ್ಷಣಾ ಮಂತ್ರಿ ಮೈಕೆಲ್ ಫಾಲನ್ ಬಿಬಿಸಿಗೆ ಉತ್ತರಿಸಿದ ರೀತಿ, "ಈ ದಾಳಿ ಒಂಟಿ ತೋಳದ ದಾಳಿ, ವಾಹನ, ಚೂರಿ ಅಥವಾ ಇನ್ನಿತರ ದಿನನಿತ್ಯ ಸಾಮಾನ್ಯವಾಗಿ ಬಳಸುವ ವಸ್ತುಗಳನ್ನು ಬಳಸಿಕೊಂಡು ಮಾಡುವ ದಾಳಿಗಳನ್ನು ಊಹಿಸುವುದು ಕಷ್ಟಸಾಧ್ಯ..." ಒಂಟಿ ತೋಳದ ದಾಳಿ ಪ್ರಕರಣಗಳು ಹೆಚ್ಚಿನ ಯೋಜನೆಯಿಲ್ಲದೆ, ಹಠಾತ್ತನೆ ಸಂಭವಿಸುವುದರಿಂದ, ಇದನ್ನು ತಡೆಯಲು ಗುಪ್ತಚರ ಮಾಹಿತಿ ಮತ್ತಿನ್ನಿತರ ಭದ್ರತಾ ವ್ಯವಸ್ಥೆಗಳನ್ನು ಯೋಜಿಸುವುದು ಸಾಧ್ಯವಿಲ್ಲ ಎಂಬ ತರ್ಕದ ಆಧಾರದಲ್ಲಿ ಸರಕಾರ ಹೆಚ್ಚಿನ ಶ್ರಮವಿಲ್ಲದೆ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಬಹುದು. ಈ ವಾದದಲ್ಲಿ ಸತ್ಯಾಂಶವಿರುವುದು ನಿಜವೇ ಆದರೂ, ಇತ್ತೀಚಿನ ಉಗ್ರ ಪ್ರಕರಣಗಳಲ್ಲಿ ಆಯಾ ದೇಶಗಳ ಸರಕಾರಗಳು ತಮ್ಮ ಭದ್ರತಾ ವೈಫಲ್ಯದಿಂದ ನುಣುಚಿಕೊಳ್ಳುವ ಪ್ರಯತ್ನದಲ್ಲಿ 'ಒಂಟಿ ತೋಳದ ದಾಳಿ'ಯ ಕಟ್ಟುಕತೆ ಅಪ್ಯಾಯಮಾನವಾಗುತ್ತಿರುವುದು ಸುಳ್ಳಲ್ಲ.

ಸರಕಾರಗಳು ಮಾತ್ರವಲ್ಲದೇ ಭಯೋತ್ಪಾದಕ ಸಂಘಟನೆಗಳೂ ಈ 'ಒಂಟಿ ತೋಳ'ದ ಪರಿಕಲ್ಪನೆಯ ಪರವಾಗಿದ್ದಾರೆ. ಉಗ್ರರ ಲೆಕ್ಕಾಚಾರದ ಪ್ರಕಾರ, ಒಂಟಿ ತೋಳದ ದಾಳಿಯ ಪರಿಕಲ್ಪನೆಯನ್ನು ಜಗತ್ತು ನಂಬಿರುವ ತನಕ, ಪ್ರತಿ ಮುಸ್ಲಿಂ ವ್ಯಕ್ತಿಯನ್ನು ಅನುಮಾನದಿಂದ ನೋಡಲಾಗುತ್ತದೆ. ಈ ಮೂಲಕ ಉಗ್ರರಲ್ಲದ ಮುಸ್ಲಿಮರೂ ಕೂಡ ಮುಖ್ಯವಾಹಿನಿ ಸಮಾಜದೊಂದಿಗೆ ಬೆರೆಯಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಮೂಲಕ ಇಸ್ಲಾಮಿಕ್ ಸ್ಟೇಟ್ ನಂಥಾ ಸಂಘಟನೆಗಳು ನಿರಾತಂಕವಾಗಿ ತಮ್ಮ ದುರುದ್ದೇಶಗಳನ್ನು ಸಾಧಿಸಿಕೊಳ್ಳಬಹುದು! ಮಾಧ್ಯಮಗಳು ಅಥವಾ ಇನ್ಯಾವುದೋ ಒತ್ತಡಕ್ಕೆ ಮಣಿದು ಒಂಟಿ ತೋಳದ ಕಟ್ಟುಕತೆಯನ್ನು ಮುಂದಿಡುವ ಅನಿವಾರ್ಯತೆ ಸರಕಾರ ಮತ್ತು ಭಯೋತ್ಪಾದನಾ ನಿಗ್ರಹ ಸಂಸ್ಥೆಗಳಿಗಿವೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಆದರೆ ಈ ಪ್ರವೃತ್ತಿ ಮುಂದುವರಿದರೆ ತೋಳ ಬಂತು ತೋಳ ಕಥೆಯಂತೆಯೇ, ಇವತ್ತು ವಿಶ್ವದಾದ್ಯಂಥ ಭದ್ರತಾ ವಲಯದಲ್ಲಿ ಪ್ರಚಲಿತದಲ್ಲಿರುವ ಒಂಟಿ ತೋಳದ ಕಟ್ಟುಕತೆ ಮುಂದೊಂದು ದಿನ ದುಬಾರಿಯಾಗಿ ಪರಿಗಣಿಸಬಹುದು.




(This article was published in Hosadigantha Newsapaper on 29 March 2017)

Inline image 1




      KEERTHIRAJ (prof.keerthiraj@gmail.com)
      
International Relations and Political Science
Alliance University, Bengaluru